ಪ್ರವಾಸಿ ತಾಣಗಳ ಮರಗಳು, ಶಿಲ್ಪಗಳ ಮೇಲೆ ಶಾಶ್ವತವಾಗಿ ಉಳಿಯುವಂಥ ಕೆತ್ತನೆ ಕೀಟಲೆಗೆ ಕೈ ಹಾಕಬೇಡಿ.ಇಂಥ ಕ್ರಿಯೆ ಮಾಡುವವರಿಗೆ ತಿಳಿಹೇಳಿ. ಪ್ರಯಾಣಕ್ಕೆ ತೆರಳಿದ ತಾಣ ನೆನಪಿನಲ್ಲಿ ಉಳಿಸಿಕೊಳ್ಳುವ ಮನಸ್ಸು ನಿಮ್ಮದಾಗಿರಲಿ. ಸೂಚನೆ: ಚಿತ್ರಗಳ ಮೇಲೆ ಕ್ಲಿಕ್ಕಿಸಿ ಗ್ರಾತ್ರವನ್ನು ಹಿರಿದಾಗಿಸಿ ಓದುವ ಅನುಕೂಲವಿರುತ್ತದೆ.

Friday, August 26, 2011

ಪುಷ್ಪಗಿರಿ ವನ್ಯಧಾಮ


ಮುಂಬೈ ಮೇರಿ ಜಾನ್


ದೇವನಹಳ್ಳಿ ಕೋಟೆ



ದೇವನಹಳ್ಳಿ ಕೋಟೆಯು ಬೆಂಗಳೂರಿನಿಂದ ಸುಮಾರು ೩೫ ಕಿ.ಮೀ ದೂರದಲ್ಲಿದೆ. ಇದನ್ನು ಮಲ್ಲಬೈರೇಗೌಡ ಎಂಬ ರಾಜನು ಕಟ್ಟಿಸಿದನು. ೧೫ನೇ ಶತಮಾನದಲ್ಲಿ ಕಂಚಿಯಿಂದ ಅಲೆಮಾರಿಗಳಾಗಿ ಬಂದ ಒಂದು ಕುಟುಂಬದವರು ರಾಮಸ್ವಾಮಿ ಬೆಟ್ಟದಡಿಯಲ್ಲಿ ತಮ್ಮ ಡೇರೆಯನ್ನು ಹಾಕಿದ್ದರು. ಅವರ ನಾಯಕನಾಗಿದ್ದ ರಣ ಬೈರೇಗೌಡನಿಗೆ ಕನಸಿನಲ್ಲಿ ಅಲ್ಲಿಯೇ ಸಮೀಪದಲ್ಲಿದ್ದ ಹಳ್ಳಿಗೆ ಹೋಗಬೇಕೆಂದು ನಿರ್ದೇಶನವಾಯಿತು. ಅಲ್ಲಿಯೇ ರಣ ಬೈರೇಗೌಡನ ಮಗನಾದ ಮಲ್ಲಬೈರೇಗೌಡನು ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರವನ್ನು ಶೋಧಿಸಿದನು. ಈ ಕೋಟೆಯಲ್ಲಿ ವೇಣುಗೋಪಾಲಸ್ವಾಮಿ ದೇವಸ್ಥಾನವಿದೆ.

ಕಿತ್ತೂರಿನ ಕೋಟೆ



ಕಿತ್ತೂರಿನ ಕೋಟೆಯು ಬೆಳಗಾವಿ ಜಿಲ್ಲೆಯ ಕಿತ್ತೂರಿನಲ್ಲಿ ರಾಣಿ ಚನ್ನಮ್ಮಳ ಧೈರ್ಯ ಸಾಹಸದ ಪ್ರತಿಕವಾಗಿ ನಿಂತಿದೆ. ದತ್ತು ಪುತ್ರನನ್ನು ರಾಜನ ಉತ್ತರಾಧಿಕಾರಿಯಾಗಿ ಮನ್ನಿಸಲಾಗುವುದಿಲ್ಲ ಎಂಬ ಬ್ರಟಿಷರ ಕುತಂತ್ರದ ವಿರುದ್ಧ ಸಿಡಿದೆದ್ದ ರಾಣಿ ಚನ್ನಮ್ಮ ತನ್ನ ಕೋಟೆಯನ್ನು ಉಳಿಸಿಕೊಳ್ಳಲು ಬ್ರಿಟಿಷರ ವಿರುದ್ಧ ಘೋರ ಯುದ್ಧವನ್ನು ಸಾರಿದಳು. ಈ ಯುದ್ಧದಲ್ಲಿ ಧೈರ್ಯದಿಂದ ಹೋರಾಡಿದ ಚನ್ನಮ್ಮ ಈಗಲೂ ಸ್ತ್ರೀ ಕುಲಕ್ಕೆ ಆದರ್ಶಪ್ರಾಯಳಾಗಿದ್ದಾಳೆ.

ಚಿತ್ರದುರ್ಗದ ಕಲ್ಲಿನ ಕೋಟೆ




ಚಿತ್ರದುರ್ಗದ ಕೋಟೆಯನ್ನು ೧೦ನೇ ಶತಮಾನದಿಂದ ಹಿಡಿದು ೧೮ನೇ ಶತಮಾನದ ವರೆಗೆ ರಾಷ್ಟ್ರಕೂಟ, ಚಾಲುಕ್ಯ, ಹೊಯ್ಸಳ, ವಿಜಯನಗರ ಸಂಸ್ಥಾನ ಮುಂತಾದ ಅನೇಕ ಮಹಾನ ಸಂಸ್ಥಾನಗಳಿಂದ ಕಟ್ಟಲ್ಪಟ್ಟಿತು. ಈ ಕೋಟೆಯಲ್ಲಿ ಏಳು ಭದ್ರವಾದ ಕಲ್ಲಿನ ಕೋಟೆಗಳನ್ನು ನಿರ್ಮಿಸಲಾಗಿದೆ. ಈ ಕೋಟೆಯಲ್ಲಿ ಅನೇಕ ನೀರಿನ ಕೊಳಗಳನ್ನು ಒಂದಕ್ಕೊಂದು ಜೋಡಿಸಲಾಗಿದೆ ಮತ್ತು ಮಳೆ ನೀರು ಸಂಗ್ರಹ ಮಾಡಲು ವ್ಯವಸ್ಥೆ ಮಾಡಲಾಗಿದೆ. ಆದ್ದರಿಂದ ಇಲ್ಲಿ ನೀರಿಗೆ ಎಂದಿಗೂ ತೊಂದರೆಯಾಗುವುದಿಲ್ಲ. ಮದಕರಿ ನಾಯಕನ ಕಾಲದಲ್ಲಿ ಹೈದರಾಲಿಯ ಸೈನಿಕರು ಕೋಟೆಯ ಕಿಂಡಿಯಿಂದ ನುಗ್ಗಲು ಯತ್ನಿಸಿದರು. ಇದನ್ನು ನೋಡಿದ ಅಲ್ಲಿನ ಕಾವಲುಗಾರನ ಪತ್ನಿ ಓಬವ್ವ ಒನಕೆಯಿಂದ ಒಳ ನುಸುಳುತ್ತಿದ್ದ ಸೈನಿಕರನ್ನು ಹೊಡೆದು ಸಾಯಿಸಿದಳು. ಈಗಲೂ ಅಲ್ಲಿ ಈ ಕಿಂಡಿಯನ್ನು ಓಬವ್ವನ ಕಿಂಡಿ ಎಂದು ಕರೆಯಲಾಗುತ್ತದೆ ಮತ್ತು ಕೋಟೆಯನ್ನು ಶತ್ರುಗಳಿಂದ ರಕ್ಷಿಸಲು ತನ್ನ ಪ್ರಾಣವನ್ನೂ ಪಣಕ್ಕಿಟ್ಟು ಧೈರ್ಯ ಮೆರೆದ ಓಬ್ಬವ್ವ ಒನಕೆ ಓಬ್ಬವ್ವ ಎಂದು ಇತಿಹಾಸ ಪ್ರಸಿದ್ಧಳಾಗಿದ್ದಾಳೆ.

ಮಿರ್ಜಾನ್ ಕೋಟೆ



ಮಿರ್ಜಾನ್ ಕೋಟೆಯು ಉತ್ತರ ಕನ್ನಡ ಜಿಲ್ಲೆಯ ಪಶ್ಚಿಮ ಸಮುದ್ರ ದಂಡೆಯಲ್ಲಿದೆ. ಗೆರಸೊಪ್ಪದ ರಾಣಿ ಚನ್ನಭೈರಾದೇವಿಯು ಈ ಕೋಟೆಯನ್ನು ೧೬ನೇ ಶತಮಾನದಲ್ಲಿ ನಿರ್ಮಿಸಿದಳು. ಅವಳು ಈ ಕೋಟೆಯಲ್ಲಿಯೇ ವಾಸಿಸುತ್ತಾ ೫೪ ವರ್ಷ ಆಳ್ವಿಕೆಯನ್ನು ನಡೆಸಿದಳು. ಅವಳ ಆಳ್ವಿಕೆಯ ಸಮಯದಲ್ಲಿ ಮೆಣಸಿನಕಾಳು, ಕಡ್ಡಿಯುಪ್ಪು ಮತ್ತು ಅಡಕೆಯನ್ನು ರಫ್ತು ಮಾಡುತ್ತಿದ್ದರು.

ಮುದ್ಗಲ ಕೋಟೆ




ಮುದ್ಗಲ ಕೋಟೆಯು ಕರ್ನಾಟಕದ ರಾಯಚೂರು ಜಿಲ್ಲೆಯಲ್ಲಿದೆ. ಋಷಿಗಳಲ್ಲಿ ಏಳು ಬ್ರಹ್ಮರ್ಷಿಗಳು ಮತ್ತು ಇಬ್ಬರು ರಾಜರ್ಷಿಗಳಿದ್ದಾರೆ. ವಿಶ್ವಾಮಿತ್ರ ಋಷಿ ಒಬ್ಬ ರಾಜರ್ಷಿಯಾಗಿದ್ದರೆ ಮತ್ತೊಬ್ಬರು ಮುದ್ಗಲ ಋಷಿ. ಇವರು ತುಂಬಾ ಉದಾರಿಗಳು ಮತ್ತು ಕರುಣಾಮಯಿಯಾಗಿದ್ದರು. ಇವರು ಮುದ್ಗಲೋಪನಿಷತ್ ಎಂಬ ಉಪನಿಷತ್ ಬರೆದಿದ್ದಾರೆ. ಮುದ್ಗಲ ಕೋಟೆಯಲ್ಲಿ ಅಶ್ವಥನಾರಾಯಣ, ಶ್ರೀ ವೆಂಕಟೇಶ್ವರ, ನರಸಿಂಹ ಮತ್ತು ದಿಡ್ಡೇರಾಯರ ದೇವಸ್ಥಾನಗಳಿವೆ. ಮುದ್ಗಲ ಋಷಿ ಶಿಲಾಯುಗದವರಾಗಿದ್ದಾರೆ. ನಂತರ ೧೧ನೇ ಶತಮಾನದಲ್ಲಿ ದೇಶದ ಹಲವೆಡೆಯಿಂದ ಮಕ್ಕಳು ಬಂದು ಇಲ್ಲಿ ಕಲಿಯುತ್ತಿದ್ದರು.

ಗಜೇಂದ್ರಗಢ ಕೋಟೆ



ಗಜೇಂದ್ರಗಢ ಕೋಟೆಯು ಕರ್ನಾಟಕದ ಗದಗ ಜಿಲ್ಲೆಯಲ್ಲಿದೆ. ಈ ಕೋಟೆಯನ್ನು ಹಿಂದವೀ ರಾಜ್ಯದ ಪುನರಸ್ಥಾಪನೆಯನ್ನು ಭಾರತದಲ್ಲಿ ಮಾಡಿದ ಶಿವಾಜಿ ಮಾಹಾರಾಜರು ಕಟ್ಟಿಸಿದರು. ಈ ಕೋಟೆಯು ಉದ್ದವಾದ ಬೆಟ್ಟದ ಮೇಲೆ ಅತ್ಯಂತ ಸುಂದರವಾಗಿ ಕಾಣುತ್ತದೆ. ಇಲ್ಲಿಯ ಮುಖ್ಯವಾದ ಸ್ಥಳವೆಂದರೆ ಕಾಳಕಾಳೇಶ್ವರ ದೇವಸ್ಥಾನ ಮತ್ತು ಈ ದೇವಸ್ಥಾನದ ಮುಂದೆ ಇರುವ ಅಂತರಗಂಗೆ ಕೊಳ. ಈ ಕೊಳದ ನೀರು ವರ್ಷಪೂರ್ತಿ ತುಂಬಿಯೇ ಇರುತ್ತದೆ ಮತ್ತು ಈ ಕೊಳದ ಮೂಲ ಎಲ್ಲಿದೆ ಎಂದು ಇದುವರೆಗೂ ಯಾರಿಗೂ ತಿಳಿದಿಲ್ಲ.

ಬೆಂಗಳೂರು ಕೋಟೆ



ವಿಜಯನಗರ ಸಂಸ್ಥಾನದ ಸಾಮಂತರಾಜನಾಗಿದ್ದ ಕೆಂಪೇಗೌಡ ಇವರು ಮಣ್ಣಿನ ಕೋಟೆಯೊಂದನ್ನು ನಿರ್ಮಾಣ ಮಾಡುವ ಮೂಲಕ ಬೆಂಗಳೂರನ್ನು ನಿರ್ಮಿಸಿದರು. ನಂತರ ೧೭೬೧ರಲ್ಲಿ ಹೈದರ ಅಲ್ಲಿ ಮಣ್ಣಿನ ಕೋಟೆಯ ಬದಲಿಗೆ ಕಲ್ಲಿನ ಕೋಟೆಯನ್ನು ಕಟ್ಟಿದರು.  ೨೧ ಮಾರ್ಚ್ ೧೭೯೧ ರಂದು ಮೂರನೇ ಮೈಸೂರಿನ ಯುದ್ಧದಲ್ಲಿ ಬ್ರಿಟಿಷರ ಈಸ್ಟ್ ಇಂಡಿಯಾ ಕಂಪನಿಯು ಟಿಪ್ಪು ಸುಲ್ತಾನನನ್ನು ಸೋಲಿಸಿ ಈ ಕೋಟೆಯನ್ನು ತನ್ನ ವಶಕ್ಕೆ ಪಡೆದುಕೊಂಡಿತು.

ಪಾರಸಗಢ ಕೋಟೆ



ಪಾರಸಗಢ ಕೋಟೆಯು ಬೆಳಗಾವಿಯಲ್ಲಿನ ಕೋಟೆಯಾಗಿದೆ. ೧೦ನೇ ಶತಮಾನದ ಅತ್ಯಂತ ಭವ್ಯವಾದ ಕೋಟೆಯು ಸದ್ಯ ಪಾಳು ಬಿದ್ದಿದೆ. ಕೋಟೆಯು ಸುಮಾರು ೫೦೦ ಮೀಟರ ಅಗಲ ಮತ್ತು ೩೦೦ ಮೀಟರ ಉದ್ದ ಇದೆ. ಕೋಟೆಯನ್ನು ತಗ್ಗುದಿಣ್ಣೆ ಇರುವ ಬೆಟ್ಟದಲ್ಲಿ ಕಟ್ಟಲಾಗಿದೆ ಮತ್ತು ಬೆಟ್ಟದ ಬಹುಪಾಲು ಪೊದೆಗಳಿಂದ ಮುಚ್ಚಿಹೋಗಿದೆ. ಬೆಟ್ಟವು ಕಲ್ಲು ಮಣ್ಣಿನಿಂದ ತುಂಬಿದೆ ಮತ್ತು ಇಲ್ಲಿ ಆಳವಾದ ಪ್ರಪಾತವೂ ಇದೆ. ಬೆಟ್ಟದ ಮೇಲೆ ಮಾರುತಿಯ ಮಂದಿರವಿದೆ.

ಸದಾಶಿವಗಢ



ಸದಾಶಿವಗಢ ಕೋಟೆಯು ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿದೆ. ಈ ಕೋಟೆಯನ್ನು ಕಾಳಿ ನದಿ, ಅರಬ್ಬೀ ಸಮುದ್ರ ಸೇರುವಲ್ಲಿ ಕಟ್ಟಲಾಗಿದೆ. ಈ ಕೋಟೆಯನ್ನು ಬಸವಲಿಂಗರಾಜನವರು ಕಟ್ಟಿಸಿದರು.

ಸವದತ್ತಿ ಕೋಟೆ



ಸವದತ್ತಿಯು ಬೆಳಗಾವಿ ಜಿಲ್ಲೆಯ ಪುರಾತನ ನಗರಗಳಲ್ಲಿ ಒಂದಾಗಿದೆ. ಸವದತ್ತಿ ಕೋಟೆಯನ್ನು ಸಿರಸಂಗಿ ದೇಸಾಯಿಯು ೧೮ನೇ ಶತಮಾನದಲ್ಲಿ ಕಟ್ಟಿಸಿದನು. ಈ ಕೋಟೆಯ ಮಧ್ಯದಲ್ಲಿ ಕಾಡಸಿದ್ಧೇಶ್ವರ ದೇವಸ್ಥಾನವಿದೆ ಮತ್ತು ಸುತ್ತಲೂ ಸುಂದರವಾದ ಕೆತ್ತನೆಯನ್ನು ಮಾಡಲಾಗಿದೆ.

ಬೆಳಗಾವಿ ಕೋಟೆ



ಬೆಳಗಾವಿ ಕೋಟೆಯು ಕರ್ನಾಟಕದ ಬೆಳಗಾವಿಯಲ್ಲಿದೆ. ಈ ಕೋಟೆಯನ್ನು ಮಾರ್ಕಾಂಡೇಯ ಎಂಬ ನದಿಯ ಬಳಿಯಲ್ಲಿ ಜಯ ರಾಯಾ ಎಂಬ ರಾಜನು ಕಟ್ಟಿಸಿದನು. ಇಲ್ಲಿ ದುರ್ಗಾದೇವಿ ಮತ್ತು ಶ್ರೀ ಗಣೇಶನ ದೇವಸ್ಥಾನಗಳಿವೆ.

ಬಳ್ಳಾರಿ ಕೋಟೆ



ಬಳ್ಳಾರಿ ಕೋಟೆಯು ಬಳ್ಳಾರಿಯ ಬಳ್ಳಾರಿಗುಡ್ಡದಲ್ಲಿದೆ. ಈ ಕೋಟೆಯನ್ನು ೨ ಭಾಗಗಳಲ್ಲಿ ಕಟ್ಟಲಾಗಿದೆ. ಮೇಲಿನ ಭಾಗವನ್ನು ವಿಜಯನಗರ ಸಂಸ್ಥಾನದ ಸಾಮಂತ ರಾಜನಾಗಿದ್ದ ಹನುಮಂತ ನಾಯಕ ಎಂಬುವವನು ಕಟ್ಟಿಸಿದನು.

ಬಸವಕಲ್ಯಾಣ ಕೋಟೆ



ಬಸವಕಲ್ಯಾಣ ಕೋಟೆ ಅಥವಾ ಕಲ್ಯಾಣ ಕೋಟೆ ಕರ್ನಾಟಕದ ಬೀದರ‍ ಜಿಲ್ಲೆಯಲ್ಲಿದೆ. ಇದು ಕಲ್ಯಾಣಿ ಚಾಲುಕ್ಯರ ರಾಜಧಾನಿಯಾಗಿತ್ತು. ಇವರು ೧೦ ರಿಂದ ೧೨ ಶತಮಾನದ ವರೆಗೆ  ಸುಮಾರು ಅರ್ಧ ಭಾರತವನ್ನು ಆಳುತ್ತಿದ್ದರು.

Saturday, July 16, 2011

ಆದಿಮ


ಕಳೆದ ಮೂರು ದಶಕಗಳಿಂದ ವಿವಿಧ ಸಾಮಾಜಿಕ ಆಂದೋಲನಗಳಲ್ಲಿ ತೊಡಗಿದ್ದ ಕೆಲವು ಗೆಳೆಯರು ನಮ್ಮ ಸಂಸ್ಕೃತಿಯ ಜೀವಪರ ಬೇರುಗಳನ್ನು ಅರಸಿ ನೀರೂಡಿಸುವ ಕನಸು ಕಂಡರು. ಅದರ ಫಲವಾಗಿ ಕೋಲಾರ ಜಿಲ್ಲೆ ಅಂತರಗಂಗೆ ಬೆಟ್ಟದ ಮೇಲೆ ಜಿಂಕೆ ರಾಮಯ್ಯ ಜೀವತಾಣದಲ್ಲಿ ಆ ಗೆಳೆಯರು ಕೂಡಿ ಆರಂಭಿಸಿದ ನಡಿಗೆಯೇ ಆದಿಮ.

ಇರುವೆಗಳು ಗೂಡು ಕಟ್ಟುವ ಹಾಗೆ ಹತ್ತಾರು ವರ್ಷಗಳ ಕಾಲ ಎಷ್ಟೋ ಮಂದಿ ಸಮಾನ ಮನಸ್ಕರು ದಿನಕ್ಕೊಂದು ರೂಪಾಯಿಯ ಹಾಗೆ ಸಂಗ್ರಹಿಸಿದ ಮೊತ್ತವೇ ಆದಿಮದ ಮೂಲ ನಿಧಿ. ಆ ಹಣದಲ್ಲಿ ಮೊದಲಿಗೆ ಮಣ್ಣಿನ ಕುಟೀರವೊಂದನ್ನು ಕಟ್ಟಿಕೊಂಡು ಆದಿಮ ತನ್ನ ನಡೆ ಆರಂಭಿಸಿತು. ಆಗಿನಿಂದ ಜಾತಿ ಮತ ಅಂತಸ್ತುಗಳಾಚೆ, ಹೆಚ್ಚಾಗಿ ಮಕ್ಕಳ ಚಟುವಟಿಕೆಗಳ ಸುತ್ತಲೇ ಆದಿಮ ಸಾಂಸ್ಕೃತಿಕ ಎಚ್ಚರದ ದಿಕ್ಕಿನಲ್ಲಿ ಹೆಜ್ಜೆಗಳನ್ನಿಡುತ್ತ ಬಂದಿದೆ. ನಿರ್ಲಕ್ಷಿತ ಸಾಂಸ್ಕೃತಿಕ ಸಮುದಾಯಗಳ ಅಂತರಂಗದ ಚಿಲುಮೆಯಾಗಲು ಯತ್ನಿಸುತ್ತ ಆ ಸಮೂಹದ ಘನತೆಯನ್ನು ಎತ್ತರಿಸುತ್ತ ಬಂದಿದೆ.



ಸದ್ಯದ ಹಲ ಬಗೆಯ ಬಿಕ್ಕಟ್ಟುಗಳಿಗೆ ನಮ್ಮ ಸಾಂಸ್ಕೃತಿಕ ಬೇರುಗಳಲ್ಲೇ ಜೀವಪರ ಉತ್ತರಗಳನ್ನು ಹುಡುಕುವುದು ಆದಿಮದ ಆಶಯ.



ಆ ನಿಟ್ಟಿನಲ್ಲಿ ಆದಿಮ ಮಕ್ಕಳ ಸುಪ್ತ ಪ್ರತಿಭೆಗೆ ನೀರೆರೆದು ಅಗತ್ಯ ತರಬೇತಿ ನೀಡುತ್ತ ನಮ್ಮ ದಿಕ್ಕೇಡಿ ಆಧುನಿಕ ಜಗತ್ತಿನ ಸವಾಲುಗಳಿಗೆ ಅವರನ್ನು ಸಜ್ಜುಗೊಳಿಸುತ್ತಿದೆ. ಈ ನಡಿಗೆ, ಹಾಡು, ನೃತ್ಯರೂಪಕ, ನಾಟಕ ಮುಂತಾದ ಸಮೂಹ ಕಲೆಗಳ ಸಂಭ್ರಮದ ಮೂಲಕ ಸಾಕಾರಗೊಳ್ಳುತ್ತಿದೆ.

ಎಳೆಯರಷ್ಟೇ ಅಲ್ಲದೆ, ನಿರಂತರ ಸಂವಾದ-ವಾಗ್ವಾದಗಳ ಮೂಲಕ ಎಲ್ಲದರಲ್ಲೂ ಸಾಂಸ್ಕೃತಿಕ ಎಚ್ಚರ ತರುವುದು ಆದಿಮದ ಕಾಳಜಿ.

ಬನ್ನಿ, ಜೀವರಕ್ಷಣೆಗೆ ಸಮನಾದ ಈ ಪಯಣದಲ್ಲಿ ಜೊತೆಯಾಗಿ ಹೆಜ್ಜೆಯಿಡೋಣ.

ಹುಣ್ಣಿಮೆ ಹಾಡು- ಆ ಬೆಟ್ಟದಲ್ಲಿ ಬೆಳದಿಂಗಳಲ್ಲಿ......
ಪ್ರತಿ ಹುಣ್ಣಿಮೆ ರಾತ್ರಿ ಬೆಟ್ಟದ ಮೇಲೆ ನಡೆಯುವ ಹುಣ್ಣಿಮೆ ಹಾಡು- ಆದಿಮದ ಬಹು ಮುಖ್ಯ ಸಾಂಸ್ಕೃತಿಕ ಚಟುವಟಿಕೆಗಳಲ್ಲೊಂದು.
ನಾಟಕ, ಹಾಡು, ಹಸೆ, ನೃತ್ಯ ಹಾಗೂ ವಿವಿಧ ಜಾನಪದ ಕಲಾ ಪ್ರಕಾರಗಳ ಪ್ರದರ್ಶನ- ಹೀಗೆ ಬಹು ವಿಧದ ಕಾರ್ಯಕ್ರಮಗಳು ತಿಂಗಳು ತಿಂಗಳೂ ತಪ್ಪದೆ ನಡೆಯುತ್ತ ಬಂದಿವೆ.
ಹುಣ್ಣಿಮೆ ಹಾಡು ಇಂದು ಜಿಲ್ಲೆಯ ಸಾಂಸ್ಕೃತಿಕ ಹೆಗ್ಗುರುತುಗಳಲ್ಲೊಂದಾಗಿ ಬೆಳೆದಿರುವುದರಿಂದಲೇ ಪ್ರತಿ ಕಾರ್ಯಕ್ರಮಕ್ಕೂ ಸಾವಿರಾರು ಜನ ಸೇರಿ ಉತ್ಸಾಹದಿಂದ ಪಾಲ್ಗೊಂಡು ಹಬ್ಬದ ವಾತಾವರಣ ಸೃಷ್ಟಿಸುತ್ತಾರೆ.


ಆದಿಮ ನಡೆ- ತರಬೇತಿ, ಪ್ರಯೋಗ, ಪ್ರದರ್ಶನ
ಕಳೆದ ಸಾಲಿನಲ್ಲಿ ನುರಿತ ರಂಗಪಟುಗಳಿಂದ ಯುವಕ-ಯುವತಿಯರಿಗೆ ತರಬೇತಿ ನೀಡಿ ಆದಿಮ ಸಿದ್ಧಪಡಿಸಿದ ನೃತ್ಯ ರೂಪಕಗಳು ಮೂರು- ಹಕ್ಕಿಹಾಡು, ಕಿನ್ನರಿ ನುಡಿದೋ ಮತ್ತು ಅಣ್ಣಾ ಹಜಾರೆ. ಆದಿಮದ ಈ ಅರೆ ರೆಪರ್ಟರಿ ಐದು ತಿಂಗಳ ಕಾಲ ಅನೇಕ ಕಡೆಗಳಲ್ಲಿ ಯಶಸ್ವಿ ಪ್ರದರ್ಶನ ನೀಡಿದೆ.
ಹೀಗೆ ಪ್ರತಿ ವರ್ಷವೂ ಒಂದೊಂದು ಹೊಸ ತಂಡ ರೂಪುಗೊಳ್ಳುತ್ತದೆ.



ಚುಕ್ಕಿಮೇಳ- ಮಕ್ಕಳ ಬೇಸಿಗೆ ಶಿಬಿರ
1999ರಿಂದ ಚೌಕಿ ಸಂಸ್ಕೃತಿ ಕೇಂದ್ರದ ಮೂಲಕ ಪ್ರತಿ ವರ್ಷವೂ ಚುಕ್ಕಿಮೇಳ- ಮಕ್ಕಳ ಬೇಸಿಗೆ ಶಿಬಿರಗಳನ್ನು ಅತ್ಯಂತ ಸಾರ್ಥಕವಾಗಿ ನಿರ್ವಹಿಸಲಾಗುತ್ತಿದೆ. ಇದರೊಂದಿಗೆ, ಕನ್ನಡ ರಂಗಭೂಮಿಗೆ ಹತ್ತಕ್ಕೂ ಹೆಚ್ಚು ಹೊಸ ನಾಟಕಗಳು ಕೊಡುಗೆಯಾಗಿ ಸಂದಿವೆ.
ಇದೀಗ ಚುಕ್ಕಿಮೇಳವನ್ನು ಆದಿಮ ಕೇಂದ್ರದಲ್ಲೇ ಆಯೋಜಿಸಲಾಗುತ್ತಿದೆ.

ಆದಿಮ ಪ್ರಕಾಶನ
ಅರ್ಥಪೂರ್ಣ ಸಾಂಸ್ಕೃತಿಕ ಸಂವಾದದ ಆಶಯಕ್ಕೆ ಪೂರಕವಾದ ಮತ್ತೊಂದು ಚಟುವಟಿಕೆ- ಪುಸ್ತಕಗಳ ಪ್ರಕಟಣೆ. ಈ ನಿಟ್ಟಿನಲ್ಲಿ ಆದಿಮ ಪ್ರಕಾಶನ ಈವರೆಗೆ ಮಹತ್ವದ ಐದು ಕೃತಿಗಳನ್ನು ಹೊರತಂದಿದೆ:
1. ಆವರಣ ಅನಾವರಣ- ಎನ್.ಎಸ್.ಶಂಕರ್.
ಎಸ್.ಎಲ್.ಭೈರಪ್ಪನವರ ಕೋಮುವಾದಿ ಪ್ರಣಾಳಿಕೆಯ ಕಾದಂಬರಿ ಆವರಣಕ್ಕೆ
ಸಮರ್ಥ ಪ್ರತಿಕ್ರಿಯೆ. ನಾಡಿನ ಸಾಂಸ್ಕೃತಿಕ ವಲಯದಲ್ಲಿ ಹೊಸ ವಾಗ್ವಾದವನ್ನು
ಹುಟ್ಟುಹಾಕಿದ ಹೊತ್ತಗೆ.
2. ಕನಕ ಮುಸುಕು- ಡಾ.ಕೆ.ಎನ್.ಗಣೇಶಯ್ಯ
ಕನ್ನಡಕ್ಕೇ ವಿಶಿಷ್ಟವಾದ ಇತಿಹಾಸ ಸಂಶೋಧನೆ ಆಧಾರಿತ ಕೌತುಕಮಯ ಕಾದಂಬರಿ.
3. ಸಾಮಾನ್ಯನ ಸಂಕ್ರಮಣ- ಎನ್.ಎಸ್.ಹಾಲಪ್ಪ
ಸಾಮಾನ್ಯನೊಬ್ಬನ ಸ್ವಾತಂತ್ರ್ಯ ಹೋರಾಟ ಅನುಭವದ ಅಪರೂಪದ ದಾಖಲೆ.
4. ಕಾರಿಡಾರ್ ಕಾಲಕೋಶ- ಜೆಸುನಾ
ಹಿರಿಯ ಪತ್ರಕರ್ತ ಜೆಸುನಾ ನೀಡಿದ- ನಮ್ಮ ರಾಜಕೀಯ ನಾಯಕರ ದೈನಂದಿನದ ಆಪ್ತ ಚಿತ್ರಣ.
5. ಬ್ರಾಹ್ಮಣ ಧರ್ಮದ ದಿಗ್ವಿಜಯ- ಡಾ.ಬಿ.ಆರ್.ಅಂಬೇಡ್ಕರ್
ಕನ್ನಡಕ್ಕೆ:ಎನ್.ಎಸ್.ಶಂಕರ್. ಹಿಂದೂ ಚರಿತ್ರೆಯಲ್ಲಿ ಆಸಕ್ತಿ ಉಳ್ಳವರೆಲ್ಲರೂ
ಕಡ್ಡಾಯವಾಗಿ ಓದಬೇಕಾದ- ಅಂಬೇಡ್ಕರರ ಸ್ಫೋಟಕ ಸಂಶೋಧನಾ ಕೃತಿಯ
ಕನ್ನಡಾನುವಾದ.
******

ನಮ್ಮೊಂದಿಗೆ ನೀವೂ ಹೆಜ್ಜೆಗೂಡಿಸುವಂತಿದ್ದರೆ, ನೀವು
* ದಿನಕ್ಕೊಂದು ರೂಪಾಯಿ ಕೂಡಿಸಿ ನೀಡುವ ಮೂಲಕ ಆದಿಮದ ಸದಸ್ಯರಾಗಬಹುದು
* ಆದಿಮ ಕಾರ್ಯ ಚಟುವಟಿಕೆಗಳಿಗೆ ನಿಮ್ಮಿಂದಾದಷ್ಟು ಹಣದ ನೆರವು ನೀಡುವ ಮೂಲಕ ನಮ್ಮ
ಬಳಗದಲ್ಲಿ ಒಬ್ಬರಾಗಬಹುದು
* ಆದಿಮ ರೆಪರ್ಟರಿಯ ಪ್ರಯೋಗಗಳನ್ನು ಆಹ್ವಾನಿಸಿ ನಿಮ್ಮ ಶಾಲೆ/ಸಮಾರಂಭಗಳಲ್ಲಿ ಅರ್ಥಪೂರ್ಣ
ಮನರಂಜನೆ ಒದಗಿಸುವ ಮೂಲಕವೂ ಆದಿಮಕ್ಕೆ ನೆರವಾಗಬಹುದು
* ಆದಿಮ ಗ್ರಂಥಾಲಯಕ್ಕೆ ಪುಸ್ತಕಗಳ ಕೊಡುಗೆ ನೀಡಬಹುದು.

ನಿಮ್ಮ ಸಲಹೆ ಸೂಚನೆಗಳಿಗೂ ಸ್ವಾಗತ.


ಬ್ಯಾಂಕ್ ಖಾತೆ: ಕೆನರಾ ಬ್ಯಾಂಕ್, ಕೋಲಾರ
ಖಾತೆಯ ಹೆಸರು: ಆದಿಮ ಸಾಂಸ್ಕೃತಿಕ ಸಂಘಟನೆ
ಖಾತೆ ಸಂಖ್ಯೆ: 0539101025242
ವಿಳಾಸ:

ಆದಿಮ
ಜಿಂಕೆ ರಾಮಯ್ಯ ಜೀವತಾಣ
ಶಿವಗಂಗೆ, ಮಡೇರಹಳ್ಳಿ ಅಂಚೆ
ಕೋಲಾರ-563 101

ಫೋನ್: 08892769414
ಇ-ಮೇಲ್: adimaramaiah@gmail.com