ಪ್ರವಾಸಿ ತಾಣಗಳ ಮರಗಳು, ಶಿಲ್ಪಗಳ ಮೇಲೆ ಶಾಶ್ವತವಾಗಿ ಉಳಿಯುವಂಥ ಕೆತ್ತನೆ ಕೀಟಲೆಗೆ ಕೈ ಹಾಕಬೇಡಿ.ಇಂಥ ಕ್ರಿಯೆ ಮಾಡುವವರಿಗೆ ತಿಳಿಹೇಳಿ. ಪ್ರಯಾಣಕ್ಕೆ ತೆರಳಿದ ತಾಣ ನೆನಪಿನಲ್ಲಿ ಉಳಿಸಿಕೊಳ್ಳುವ ಮನಸ್ಸು ನಿಮ್ಮದಾಗಿರಲಿ. ಸೂಚನೆ: ಚಿತ್ರಗಳ ಮೇಲೆ ಕ್ಲಿಕ್ಕಿಸಿ ಗ್ರಾತ್ರವನ್ನು ಹಿರಿದಾಗಿಸಿ ಓದುವ ಅನುಕೂಲವಿರುತ್ತದೆ.

Saturday, June 25, 2011

ಧರ್ಮ, ಸಂಸ್ಕೃತಿಯ ನೆಲೆವೀಡು

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಮತ್ತು ಪುತ್ತೂರು ತಾಲೂಕುಗಳು ಧಾರ್ಮಿಕ, ಸಾಂಸ್ಕೃತಿಕ ಪ್ರಸಿದ್ಧಿಯನ್ನು ಹೊಂದಿವೆ.
ಬಂಟ್ವಾಳ ತಾಲೂಕಿನ ನಡುವೆ ನೇತ್ರಾವತಿ, ಅಂಚಿನಲ್ಲಿ ಫಲ್ಗುಣಿ ಹರಿಯುತ್ತಾಳೆ. ಹಾಗಾಗಿ ಕೃಷಿ, ತೋಟಗಾರಿಕೆಯಲ್ಲಿ ಸಮೃದ್ಧವಾಗಿದೆ ಬಂಟ್ವಾಳ.
ಬಂಟ್ವಾಳ ಧಾರ್ಮಿಕ ಕ್ಷೇತ್ರಗಳಿಗೆ ಪ್ರಸಿದ್ಧವಾಗಿದೆ. ಬಂಟ್ವಾಳದ ಪ್ರಮುಖ ಕೇಂದ್ರವಾದ ಬಿ.ಸಿ. ರೋಡ್‌ (ಹೆದ್ದಾರಿಯಾಗಿರುವುದರಿಂದ ವಿಶೇಷ ಬೆಳವಣಿಗೆ ಸಾಧ್ಯವಾಗಿದೆ) ಸುವ್ಯವಸ್ಥಿತ ವಸತಿ ಗೃಹಗಳನ್ನು ಹೊಂದಿದೆ. ಅಲ್ಲಿಂದ ತಾಲೂಕಿನ ಪ್ರಮುಖ ತಾಣಗಳಿಗೆ ಸಂದರ್ಶನವನ್ನು ವ್ಯವಸ್ಥೆ ಮಾಡಿಕೊಳ್ಳಬಹುದು.

ಬಂಟ್ವಾಳದಿಂದ 10 ಕಿ.ಮೀ., ಮಂಗಳೂರಿನಿಂದ 20 ಕಿ.ಮೀ. ಅಂತರದ ಪೊಳಲಿಯ ಶ್ರೀ ರಾಜರಾಜೇಶ್ವರೀ ದೇವಸ್ಥಾನ ಪುರಾಣ ಇತಿಹಾಸ ಪ್ರಸಿದ್ಧ .
ಇಲ್ಲಿನ ಮೃಣ್ಮಯ ಮೂರ್ತಿಗಳು ದೇಶದಲ್ಲೇ ಅನನ್ಯ ಎಂಬ ಪ್ರಖ್ಯಾತಿ. ಪ್ರಕೃತಿ ಮಡಿಲಲ್ಲಿರುವ ಶ್ರೀ ಕಾರಿಂಜೇಶ್ವರ ಕ್ಷೇತ್ರ, ಶ್ರೀ ತಿರುಮಲ ವೆಂಕಟರಮಣ ದೇವಸ್ಥಾನ, ನರಹರಿ ಸದಾಶಿವ ದೇವಾಲಯ, ನಂದಾವರ ಶ್ರೀ ವಿನಾಯಕ ಶಂಕರನಾರಾಯಣ ಕ್ಷೇತ್ರ, ಪಣೋಲಿಬೈಲು ಕಲ್ಲುರ್ಟಿ ದೇವಸ್ಥಾನ, ವಿಟ್ಲದ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ, ದಕ್ಷಿಣದ ಗಾಣಗಾಪುರ ಎಂಬ ಖ್ಯಾತಿಯ ಒಡಿಯೂರಿನ ಶ್ರೀ ಗುರುದೇವದತ್ತ ಸಂಸ್ಥಾನ ಮುಂತಾದ ಪ್ರಸಿದ್ಧ ಸಾನಿಧ್ಯಗಳು. ಬಿ.ಸಿ. ರೋಡ್‌ನಿಂದ ಆರು ಕಿ.ಮೀ. ಅಂತರದ ಜಕ್ರಿಬೆಟ್ಟು ಸಮೀಪದ ಅಗ್ರಾರ್‌ನ ದಿ ಮೋಸ್ಟ್‌ ಹೋಲಿ ಜೇವಿಯರ್‌ ಚರ್ಚ್‌, 18 ಕಿ.ಮೀ. ಅಂತರದಲ್ಲಿರುವ ಅಜಿಲಮೊಗರು ಜುಮ್ಮಾ ಮಸೀದಿ... ಹೀಗೆ ಬಂಟ್ವಾಳದಲ್ಲಿ ಪ್ರಮುಖ ತಾಣಗಳಿವೆ.
ಪುತ್ತೂರು ತಾಲೂಕು
ಸಾಂಸ್ಕೃತಿಕವಾಗಿ ವಿಶೇಷ ಪರಂಪರೆಗಳನ್ನು ಹೊಂದಿರುವ ಪುತ್ತೂರು ಸಮುದ್ರ ಮಟ್ಟದಿಂದ 400 ಅಡಿ ಎತ್ತರವಿರುವ ನಿಸರ್ಗ ಸೌಂದರ್ಯದ ತಾಣ. ನೇತ್ರಾವತಿ - ಕುಮಾರಧಾರಾ ನದಿಗಳು ಸಂಗಮಿಸುವ ಉಪ್ಪಿನಂಗಡಿಯು (ಪುತ್ತೂರಿನಿಂದ 12 ಕಿ.ಮೀ.) ಗಯಾಪದ ಕ್ಷೇತ್ರ, ದಕ್ಷಿಣ ಕಾಶಿ ಎಂಬ ಪೌರಾಣಿಕ ವರ್ಣನೆಯನ್ನು ಹೊಂದಿದೆ.











ತುಳುನಾಡಿನ ವೀರ ಪುರುಷರಾಗಿರುವ ಅವಳಿ ಸಹೋದರರಾದ ಕೋಟಿ - ಚೆನ್ನಯರು ಜನಿಸಿದ ಪಡುಮಲೆಯು ಪುತ್ತೂರಿನಿಂದ 25 ಕಿ.ಮೀ. ಅಂತರದಲ್ಲಿದೆ. ಕರಾವಳಿಯುದ್ದಕ್ಕೂ ಅವರನ್ನು ಗರಡಿಗಳಲ್ಲಿ ಆರಾಧಿಸಿಕೊಂಡು ಬರಲಾಗುತ್ತಿದೆ. ಅವರು ಸಾಹಸ ಮೆರೆದ ಕಥಾನಕದ ಎಲ್ಲಾ ಕೇಂದ್ರಗಳೂ ತಾಲೂಕಿನಾದ್ಯಂತ ಈಗಲೂ ಇವೆ.

 ಪುತ್ತೂರು ಪೇಟೆಯಲ್ಲಿರುವ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಬಿರುಮಲೆ ಬೆಟ್ಟ , ಶಿವರಾಮ ಕಾರಂತರ ಪ್ರಯೋಗ ರಂಗವಾಗಿದ್ದ ಬಾಲವನ ಇಲ್ಲಿದೆ. ದಕ್ಷಿಣ ಭಾರತದ ಏಕೈಕ ಬಿಸಿ ನೀರಿನ ಚಿಲುಮೆ "ಬೆಂದ್ರ್ತೀರ್ಥ' ತಾಲೂಕಿನ ಇರ್ದೆ ಗ್ರಾಮದಲ್ಲಿದೆ. ಈ ಅಪೂರ್ವ ತಾಣವನ್ನು ಪ್ರವಾಸೋದ್ಯಮ ಇಲಾಖೆ ನಿರ್ಲಕ್ಷಿಸಿರುವುದರಿಂದ ಪ್ರವಾಸಿಗರಿಗೆ ಅನಾನುಕೂಲವಾಗಿದೆ.

No comments:

Post a Comment